Monday, December 18, 2006

ನೀನೊಮ್ಮೆ ನನ್ನ ನೋಡಬಾರದೇ?

(ಆತನ ಹಂಬಲ)

ಕೇರಿಯ ಗೆಳತಿಯರೊಂದಿಗೆ ನಗುತ
ಕೊಡಪಾನವ ಹೊತ್ತು
ಬಾವಿಕಟ್ಟೆಗೆ ಬಂದು
ಮತ್ತೆ ನಗುತಲೆ
ಬಂಡಿಗೆ ಹಗ್ಗವ ಹಾಕಿ
ಕೊಡದ ಕುತ್ತಿಗೆಗೆ ನುಣಿಕೆಯ ಕಟ್ಟುತ್ತ
ನೀರೊಳಗೆ ಕೊಡವ ಬಿಟ್ಟು
ಏನನ್ನೋ ಹೇಳಿ ನಗುವಳು
ಹಗ್ಗವ ಎತ್ತಿ, ಬಿಡುತ್ತ
ನೀರು ತುಂಬಿತೇ? ಎಂದು ನೋಡುವಳು
ತುಂಬಿದ ಕೊಡವನೆತ್ತಿ
ಸೊಂಟದ ಮೇಲೆ ಇಡುತ್ತ
ಮನೆಯತ್ತ ಸಾಗುವಳು
ಆಯಿತೇನೆ? ಎಂದು ಗುಂಪಿನಿಂದ ಕೂಗಿದರೆ
ಇನ್ನೊಂದು ದಾರಿ ಎಂದು ಅವಳನ್ನಲು
ಅಬ್ಬ ಎನ್ನುವುದು ನನ್ನೆದೆ
ಇಲ್ಲೆ ನಿಂತಿರುವೆ,ಇಲ್ಲೆ ನಿಲ್ಲುವೆ
ನಿನ್ನ ದಾರಿಗಳು ಮುಗಿಯುವವರೆಗೂ
ನೀನೊಮ್ಮೆ ನನ್ನ ನೋಡಬಾರದೇ?


ದಾರಿ= ಸರತಿ, ಸಲ
ಕೊಡಪಾನ= ಕೊಡ

21 comments:

Anonymous said...

ಊರ ಸರ್ಕಾರಿ ಬಾವಿಯಿಂದ ನೀರು ಹೊರುತ್ತಿದ್ದ ಅಮ್ಮನ ಚಿತ್ರ ಕಣ್ಣ ಮುಂದೆ ಬಂತು. ಆದರೆ ಆ ಚಿತ್ರವನ್ನೇ ಅಳಿಸಿ ಹಾಕಿರುವುದು ನಮ್ಮ ಮನೆಯ ಬಾವಿಯ ಪಂಪ್ಸೆಟ್ಟು. ಈಗ, 'ಸ್ವಿಚ್ಚನ್ನು ಒತ್ತಿ ಟ್ಯಾಂಕ್ ತುಂಬಿತೇ ಎಂದು ಕಾಯುವಳು' -ಅಷ್ಟೇ. ಕೊಡಪಾನವೂ ಬೇರೆ 'ದಾರಿ'ಯಿಲ್ಲದೆ ಸುಮ್ಮನೆ ಕುಳಿತಿದೆ ಮೂಲೆಯಲ್ಲಿ.

ಒಳ್ಳೆಯ ಕವನಕ್ಕೆ ಅಭಿನಂದನೆಗಳು.

ಮನಸ್ವಿನಿ said...

@ಸುಶ್ರುತ,

ಧನ್ಯವಾದಗಳು. :)

bhadra said...

ನೈಜ ಬದುಕಿನ ಇನ್ನೊಂದು ದೃಷ್ಟಾಂತವನ್ನು ಕನ್ನಡಿಯಲ್ಲಿ ತೋರಿಸಿದ್ದೀರಿ.
೩೫ ವರ್ಷಗಳ ಹಿಂದೆ ಹಳ್ಳಿಯಲ್ಲಿ ವಾಸಿಸುತ್ತಿದ್ದ ನಾನೇ ಇಷ್ಟೆಲ್ಲಾ ಅಬ್ಸರ್ವ್ ಮಾಡಿರಲಿಲ್ಲ. ಬಹಳ ಚಂದವಾಗಿ ಬರೆದಿದ್ದೀರಿ. ಈಗಲೂ ಹಳ್ಳಿಗಳಲ್ಲಿ ಇಂತಹ ಸನ್ನಿವೇಶಗಳು ಕಾಣಸಿಗುವವೇ?

ಉತ್ತಮವಾದ ಕವನ ಕೊಟ್ಟದ್ದಕ್ಕೆ ವಂದನೆಗಳು.

Anonymous said...

ಮನಸ್ಲಿನಿ ಅವರೆ,

ಆಯಿತೇನೆ ಎಂದು ಕೂಗಿದರೂ
ಇನ್ನೊಂದು ದಾರಿ ಎಂದು
ಅವಳಂದಳು!


ಹಾಗಾಗಿ ಇದರ ಶೀರ್ಷಿಕೆ ತಪ್ಪು...ತಪ್ಪು... ತಪ್ಪು.

Phantom said...

ಹೂನ್, ನಾನು ಬೇಕಿದ್ರೆ ಬಾವಿ ಕಟ್ಟೆತಾವ ಬಿತ್ತಿನಿ :)

ಚೆನ್ನಗಿದೆ ಕವನ.

ಇಂತಿ
ಭೂತ

ಮನಸ್ವಿನಿ said...

@ತವಿಶ್ರೀ ಸರ್,

ಧನ್ಯವಾದಗಳು. ಅಜ್ಜನ ಮನೆಯ ಊರ ಬಾವಿಕಟ್ಟೆಯ ನೆನಪು ಈ ಹಾಡಿಗೆ ಪ್ರೇರಣೆ. ಮನೆಯಲ್ಲೂ ಬಾವಿಯೇನೋ ಇದೆ, ಆದ್ರೆ ಊರ ಹೆಂಗಳೆಯರೆಲ್ಲ ಅಲ್ಲಿಗೆ ಬರುವುದಿಲ್ಲ ...ಶಿರಸಿ ಪಟ್ಟಣ ನೋಡಿ !!!!! ಮನೆಗೆ ಮಾತ್ರ ಮೀಸಲು :)

ಮನಸ್ವಿನಿ said...

ಅನ್ವೇಷಿಗಳೆ,

ನನ್ನ ಕಲ್ಪನೆಯಲ್ಲಿ, ಆಕೆ ಬಾವಿಯಿಂದ ನೀರು ಎತ್ತಿ, ಮನೆಯ ಅಡುಗೆ ಮನೆ, ಬಚ್ಚಲು, ಕೊಟ್ಟಿಗೆಯ ನೀರಿನ ಅವಶ್ಯಕತೆಗಳನ್ನ ಪೂರೈಸುತ್ತಾಳೆ. ಗೆಳತಿಯರು, ಮಧ್ಯದಲ್ಲೊಮ್ಮೆ, ನಿನ್ನ ಮನೆಗೆ ನೀರಾಯಿತಾ ಎಂದು ಕೇಳಿದಾಗ ಅವಳು ಅವರೊಂದಿಗೆ ಇನ್ನೆಷ್ಟು ದಾರಿ(ಸರತಿ)ಯಿದೆ ಎಂದು ಹೇಳುತ್ತಾಳೆ. ಅವನು ಅವಳ ಉತ್ತರವನ್ನ ಕಿವಿಯಿಟ್ಟು ಕೇಳುತ್ತಾನೆ. ಆಕೆಯ ಉತ್ತರ 'ಆಯಿತು' ಎಂದಿದ್ದರೆ ಅವನಿಗೆ , ಬೇಸರವಾಗುತ್ತಿತ್ತು...ಆಕೆಗೆ ಅವನ ಕಡೆ ಗಮನವಿಲ್ಲ, ಆತನಿಗೆ ಮಾತ್ರ ಅವಳ ಕಡೆ ಗಮನ. ಆದ್ದರಿಂದ, ಶೀರ್ಷಿಕೆ ಸರಿಯಾಗಿದೆ

ಮನಸ್ವಿನಿ said...

@ಭೂತಪ್ಪ,

ಫ್ರಾನ್ಸ ನಲ್ಲಿ ಬಾವಿಗಳು ಇವೆಯಾ? ಇದ್ದರೆ ಹೋಗಿ ನೋಡು ...ಇಲ್ಲವಾದರೆ ನೀನು ಭಾರತಕ್ಕೆ ಬಂದ ಮೇಲೆ, ಮಲೆನಾಡಿನ ಯಾವುದಾದ್ರು ಹಳ್ಳಿಗೆ ಹೋಗು...ಅಲ್ಲಿ ಬಾವಿಕಟ್ಟೆ ಹತ್ತಿರ ಯಾವುದಾದ್ರು ಹೊನ್ನ ಕಿರಣ ಸಿಕ್ಕೀತು :) :)

Phantom said...

ಮಲೆನಾಡಿಗೆ ಬರಲು ಪ್ರೇರಣೆ ಬಾವಿ ಕಟ್ಟೆಯೇ ಆದಲ್ಲಿ, ಬರಲು ಯಾವ ವಿಧವಾದ ತೊಡಕು ಇಲ್ಲ.

ಬಿಂದಿಗೆ ಮೇಲೆ ಹೊನ್ನಗಿರಣಗಳು ಬಿದ್ದು, ಅದರ ಬಿಂಬ ಕಣ್ಣಿನಿಂದ ಹೃದಯಕ್ಕೆ ಲಗ್ಗೆ ಇಟ್ಟರೇ ;)

ಇಂತಿ
ಭೂತ

ಮನಸ್ವಿನಿ said...

@ಭೂತಪ್ಪ,


"ಬಿಂದಿಗೆ ಮೇಲೆ ಹೊನ್ನಗಿರಣಗಳು ಬಿದ್ದು, ಅದರ ಬಿಂಬ ಕಣ್ಣಿನಿಂದ ಹೃದಯಕ್ಕೆ ಲಗ್ಗೆ ಇಟ್ಟರೇ ;)" ನಂಗೆ ಗೊತ್ತಿಲ್ಲಪ್ಪ ...All the best :)

Anonymous said...

ಮನಸ್ವಿನಿ,
ಪುಣ್ಯಕ್ಕೆ ಅವಳು ಕೊಡಕ್ಕೆ ನುಣಿಕೆಯನ್ನ ಕಟ್ಟುತ್ತಲೇ ಕೊಡ ಬಾವಿಗೆ ಬಿಟ್ಟಳಲ್ಲ!ಇಲ್ದೇ ಇದ್ರೆ, ಆತನ ಹಂಬಲದಲ್ಲಿ ಕೊಡ ಮುಳುಗಿರೋದು:)
ಒಳ್ಳೇ ಕವನ, "ನಿನ್ನ ದಾರಿಗಳು ಮುಗಿಯುವವರೆಗೂ
ನೀನೊಮ್ಮೆ ನನ್ನ ನೋಡಬಾರದೇ?"- ಖುಷಿ ಆಯ್ತು.

Pramod P T said...

ninna sunadara kavanadalli mallige kampiddiddare chennaagiruttittu alwaaa?
Haage neerannettuvaaga avala baLegaLu naguttiddare……:)

kavana saraLavaagi sundaravaagide.

ishTa aaytu!

Enigma said...

wow bahla chenagi baredieera . innu bareiri

ಮನಸ್ವಿನಿ said...

ಶ್ರೀನಿಧಿ,
ಅವಳಿಗೆ ಕೊಡದ ಮೇಲೆ ಗಮನ ಇತ್ತು, ಅವನ ಮೇಲೆ ಇರ್ಲಿಲ್ಲ. :)
ಧನ್ಯವಾದಗಳು.

ಮನಸ್ವಿನಿ said...

ಪ್ರಮೋದ್,

ನಿನ್ನ ಸಲಹೆ ಚೆನ್ನಾಗಿದೆ. ಆದ್ರೆ ಅವನು ಸ್ವಲ್ಪ ದೂರದಲ್ಲಿ ನಿಂತಿದ್ದ.. ಅದಕ್ಕೆ ಬಳೆ ಶಬ್ದ ಕೇಳಿಸಿಲ್ಲ.... :))

ಮನಸ್ವಿನಿ said...

@enigma,

ತುಂಬಾ ಧನ್ಯವಾದಗಳು. ಆಯ್ತು,ಬರೆಯುತ್ತೇನೆ.

Mahantesh said...

ನಿನ್ನ ದಾರಿಗಳು ಮುಗಿಯುವವರೆಗೂ
ನೀನೊಮ್ಮೆ ನನ್ನ ನೋಡಬಾರದೇ? innu manadalli
ide....intavaLanna hudakikoMdu e rajadalli malenaDige hogta idini :)- nodana sigataLe baviya hudagi.....

ಮನಸ್ವಿನಿ said...

ಮಹಾಂತೇಶ್,

ನಿಮಗೆ ಒಳ್ಳೆಯದಾಗಲಿ...ಬಾವಿ ಕಟ್ಟೆಯಲ್ಲಿ ಮಲೆನಾಡಿನ ಬೆಡಗಿ ನಿಮಗೆ ಸಿಗಲಿ. :)

Seeji said...

Good one...

Brought in bouts of Nostalgia !!! Not yet recovered....

Seeji

ಮನಸ್ವಿನಿ said...

@ Seeji,

ತುಂಬಾ ಧನ್ಯವಾದಗಳು. ದೊಡ್ಡ ಮಾತು. :)

Anonymous said...

athana hambala
Hudugiya vanchala
baalinalli ede aguvudu sala sala