Friday, June 30, 2006

ಒಳಗೆ- ಹೊರಗೆ

ನನ್ನಾಚೆ ಒಂದು ಜಗವಿದೆ
ನನ್ನೊಳು ಮತ್ತೊಂದು ಲೋಕ
ಹೊರಗೊಂದು ತಾಳ
ಒಳಗೊಂದು ತಾಳ, ಮೇಳವಿಲ್ಲ!

ಹೊರಗೆ ಉದಯ
ಒಳಗೆ ಅಸ್ತ
ಹೊರಗಿನ ಬೆಳಕಿನೊಡನೆ ಬೆಳಗಲೊ
ಒಳಗೆ ಬೆಳಕನ್ನು ಅರಸಲೊ

ಹೊರಗೆ ಮೊಗ್ಗು ಬಿರಿಯುತ್ತಿದೆ
ಒಳಗೆ ಬಳ್ಳಿ ಮುರಿಯುತ್ತಿದೆ
ಹೂವಾಗಿ ಅರಳಲೊ
ಬಳ್ಳಿಯೊಡನೆ ಜಾರಲೊ

ಹೊರಗೆ ತುಂತುರಿನ ತನನ
ಒಳಗೆ ಬತ್ತಿದೆ ಮನ
ಹನಿಯೊಡನೆ ಹನಿಯಲೊ
ಮರುಭೂಮಿಯಾಗಲೊ

ಮನವ ಬಿಟ್ಟು ಲೋಕವಿಲ್ಲ
ಲೋಕದಲ್ಲಿ ಮನವಿಲ್ಲ
ಎತ್ತ ಕಿವಿಗೊಡಲಿ?
ಎಲ್ಲಿ ಮನವಿಡಲಿ!

Monday, June 26, 2006

ತಾಯಿ ಭುವನೇಶ್ವರಿ

ತರುವಾಗಿ, ಸಿರಿಯಾಗಿ ಶ್ರೀಗಂಧವಾಗಿ
ನೀರಾಗಿ, ಬಾಳಾಗಿ ಕಾವೇರಿಯಾಗಿ
ಗಿರಿಯಾಗಿ,ಹಿರಿದಾಗಿ ಸಹ್ಯಾದ್ರಿಯಾಗಿ
ಹಸಿರಾಗಿ, ಉಸಿರಾಗಿ ಮಲೆನಾಡಾಗಿ
ಪಂಪ , ರನ್ನರ ಕಾವ್ಯಾಮೃತವಾಗಿ
ದಾಸ , ಶರಣರ ನುಡಿಮುತ್ತುಗಳಾಗಿ
ಶಿಲೆಯಲ್ಲಿ ಕಲೆಯಾಗಿ ಸೌಂದರ್ಯವಾಗಿ
ಕೆಚ್ಚೆದೆಯ ವೀರರ ಇತಿಹಾಸವಾಗಿ
ಹೊನ್ನಿನ ಮಣ್ಣಾಗಿ ಕರುನಾಡಾಗಿ
ನಡೆಯಾಗಿ, ನುಡಿಯಾಗಿ ಕನ್ನಡವಾಗಿ
ಮೆರೆದಿಹಳು ಸಿರಿದೇವಿ ಭುವನೇಶ್ವರಿಯಾಗಿ

Friday, June 23, 2006

ಕನ್ನಡದಲ್ಲಿ

ಏಷ್ಟು ಸಂತೋಷ ಆಗ್ತಾ ಇದೆ ಕನ್ನಡದಲ್ಲಿ ಬರೆಯುವುದಕ್ಕೆ!ಆಹಾಹ

ಕವನ - ಬಂಧನದಿಂ

ಬಿಡಿಸುವೆವು ಬಿಡಿಸುವೆವು ಬಂಧನದಿಂ ನಿನ್ನ
ತೊಡಿಸುವೆವು ತೊಡಿಸುವೆವು ಸ್ವಾತಂತ್ರ್ಯ ಚಿನ್ನ

ಉಸಿರುಂಟು, ಛಲವುಂಟು, ಮುನ್ನುಗ್ಗುವ ಹಠವುಂಟು
ಎಲ್ಲವನೂ ಮೀರೋ ತಾಯಿ ನಿನ್ನೊಲವುಂಟು

ಬವಣೆಯೋ,ದುಗುಡವೋ, ಕಣ್ಣೀರೋ, ಕೆನ್ನೀರೋ
ನಿನ್ನ ಒಲವಲ್ಲಿ ಕಂಡೆವು ಪನ್ನೀರು

ಬಗ್ಗಲಾರೆವು ಇನ್ನು, ನುಗ್ಗಿ ನೆಗೆಯಿರೆಲ್ಲ
ಬಗ್ಗಿ ಬರುವುದು ಗೆಲುವು ನಮಗೆಲ್ಲ

ಅದೋ ನಿಂತಿಹುದು , ಅಲ್ಲೊಮ್ಮೆ ನೋಡಿರೈ
ತಬ್ಬಿ ಮುದ್ದಾಡುವ ಸ್ವಾತಂತ್ರ್ಯವ ಬನ್ನಿರೈ

ಮಳೆ

ಸುರಿವ ಮಳೆಯಾಗಿ
ಹರಿವ ನೀರಾಗಿ
ಎಲೆಗಳ ಮೈ ಮೇಲೆ ಮುತ್ತ ಸಾಲಾಗಿ
ಪುಷ್ಪಪಾತ್ರವ ಸೇರಿ
ಅದರ ಒಡಲೊಳು ಜಾರಿ
ಭೂತಾಯ ದಾಹವ ಇಂಗಿಲೋಸುಗ
ಮಳೆಯಾಗಿ ಹರಿಯುವೆ ನಾನೀಗ

( ಹಾಡುಗಳು ಬರಲಿವೆ.........)

Thursday, June 22, 2006

ಮರೆತೇನೆ!



(ಅದ್ಭುತವಾದ ಚಿತ್ರಕ್ಕೆ ಪ್ರಮೋದರಿಗೆ ಹೃತ್ಪೂರ್ವಕ ಧನ್ಯವಾದಗಳು)