Wednesday, April 23, 2008
ಬೇಸಿಗೆಯ ರಜೆಗಳೆಂದರೆ........
ಬೇಸಿಗೆಯ ರಜೆಗಳೆಂದರೆ........
ಆರು ಮೈಲಿಯ ದೂರ, ಎರಡು ಕೇರಿಯ ಊರು
ಸುತ್ತೆಲ್ಲ ಹಸಿರು, ಮಧ್ಯೆ ಅಜ್ಜನ ಸೂರು
ಕಡುಬು, ಕಾಯಿ ಚಟ್ನಿ, ರೊಟ್ಟಿಯ ಚೂರು
ಮಿಡಿಯ ಉಪ್ಪಿನಕಾಯಿ, ಗಟ್ಟಿ ಮೊಸರು
ಆಸರಿಗೆ ಮಜ್ಜಿಗೆ , ಪಾನಕ, ಎಳೆನೀರು
ಮಾವು, ಗೇರು, ನೇರಳೆ, ಹೀಗೆ ಹಲವಾರು
ಜಜ್ಜಿದ ಹುಣಸೆ ಕಾಯಿ, ಉಪ್ಪು, ಸ್ವಲ್ಪ ಖಾರ
ಕವಳಿಯ ಮಟ್ಟಿ, ಕೊಟ್ಟಿಗೆಯ ಪುಟ್ಟ ಕರು
ಎಲೆರಾಶಿ ಮೇಲೆ ಚಿತ್ತಾರದ ಹಪ್ಪಳ
ಬಿಸಿಲಲಿ ಒಣಗಿಸಲು ನಿಲ್ಲದ ಜಗಳ
ಉರಿಬಿಸಿಲ ಹೊತ್ತಿನಲಿ ಮಕ್ಕಳ ಹಿಂಡು
ಕಳ್ಳ ಪೋಲಿಸ್, ಲಗೋರಿ, ಚಿನ್ನಿ ದಾಂಡು
ಗೋಧೂಳಿ ಹೊತ್ತಲಿ ಇನ್ನೊಮ್ಮೆ ಸ್ನಾನ
ತಲೆ ಬಾಚಿ, ಜಡೆ ಹೆಣೆದು, ಮುತ್ತ ನೀಡುವ ಅಮ್ಮ
ದೊಡ್ಡ ದೀಪದ ಮುಂದೆ ದೊಡ್ಡ ಸ್ವರದಲಿ ಭಜನೆ
ಅಮ್ಮ, ಅತ್ತೆಮ್ಮನ ಜಾನಪದದ ಮಜವೇ
ಬೀಸುಕಲ್ಲಿನಲಿ ಅಕ್ಕಿಯಾಗಿದೆ ಹಿಟ್ಟು
ಹಿಟ್ಟಲೆ ರಂಗೋಲಿ ಪುಟ್ಟ ಬೆರಳುಗಳಿಟ್ಟು
ಉರಿವ ಚಿಮಣಿಯ ಸುತ್ತ ನಿಲ್ಲದ ಚೇಷ್ಟೆ
ಮಾವನ ಕಣ್ಣುಗಳು ಎಷ್ಟಗಲ ಗೊತ್ತೇ?
ಕರೆಂಟು ಇಲ್ಲದ ಮನೆಯಲಿ, ಎಂಟಕ್ಕೆ ಊಟ
ಒಂಬತ್ತಕ್ಕೆಲ್ಲ ಹಾಗೆ ಹಾಸಿಗೆ ಸಿದ್ಧ
ಕಥೆಗಳ ಜೊತೆಗೆ, ಪಿಸು ಪಿಸು ಮಾತು
ದೊಡ್ಡವರ ಜೋರಿಲ್ಲದೆ ಮಲಗುವುದೆಂತು?
Monday, April 07, 2008
ಬೇಂದ್ರೆ ವೈಭವ
ಸುನಾಥ ಕಾಕ, ನಿಮಗೆ ಧನ್ಯವಾದಗಳು.
Monday, March 31, 2008
ಹನಿಗಳು- ೩
ಕತ್ತಲೆಯ ಎಲ್ಲೆಯ
ಹುಡುಕಲು
ಒಂದೆಳೆಯ ಬೆಳಕು
ಕಡಕ್ಕೆ ಬೇಕಿದೆ
***************
ರಾತ್ರಿಗಳಲ್ಲಿ ಕನಸಿನದು
ಮುಗಿಯದ ತಗಾದೆ
ನಿದ್ರೆಯಿಲ್ಲ ನನಗೆ
ಹಗಲಿನಲಿ ಕನಸಿಗೆ
ಭರ್ಜರಿ ನಿದ್ರೆ !
***************
ಲಕ್ಷ ಲಕ್ಷ ಚುಕ್ಕಿ
ಹಾಲುಹುಣ್ಣಿಮೆಯ ಚಂದಿರ
ಊಹೂಂ ಹಗಲಾಗುವುದಿಲ್ಲ
ಸೂರ್ಯನಿಲ್ಲವಲ್ಲ
***************
ಮನಸಿನೊಳಗಿನ
ಕಿರುಹಣತೆಗೆ
ಹೊರಗಿನ ಕತ್ತಲೂ
ಹೆದರಿ ಅಳುತ್ತಿದೆ
( ಹೊಸತಾಗಿ ಏನೂ ಬರೆಯಲಾಗುತ್ತಿಲ್ಲ.ಇವೆಲ್ಲ ಹಳೆಯ ಹನಿಗಳು. )
Monday, March 10, 2008
ಬೇಲಿ
ಬೇಲಿಯಾಚೆಗಿನ ಲೋಕ
ವಿಭಿನ್ನ,ವಿಚಿತ್ರ
ಎಲ್ಲರದೂ ಓಟವಿಲ್ಲಿ
ಎತ್ತ, ಯಾಕೆ?
ಊಹೂಂ..ಗೊತ್ತಿಲ್ಲ
ಬೇಲಿ ದಾಟಿ ಬಂದಾಗಿದೆ
ಓಡಲೇಬೇಕು ಇಲ್ಲಿರಲು
ನನ್ನದೊಂದು ಓಟ
ಮುಂದಿನವರ ಹಿಂದೆ
ಆದರೆಷ್ಟು ದೂರ?
ಎಲ್ಲಿಯವರೆಗೆ?
ಯಾವುದರ ಹುಡುಕಾಟ?
ಉತ್ತರವಿಲ್ಲದ ಪ್ರಶ್ನೆಗಳು
'ತಾನು, ತನ್ನದು'
ಎಲ್ಲರೊಳಗಣ ಇದೇ ಭಾವ
ನಿಧಾನಿಸಿದವರಿಗೆಲ್ಲ
ಹಿಂದಿನವರ ಗುದ್ದು
ಬಿದ್ದವರನೆತ್ತುವವರಿಲ್ಲ
ಹತ್ತಿ ಮುಂದೋಡುವ
ಕಾಲುಗಳ ಸಾಲು.
ನಾನು ಓಡುತ್ತಲಿದ್ದೇನೆ
ಬಲ ಇಳಿದಿದೆ;ಸಾಕೆನಿಸಿದೆ
ಭಾವಗಳು ಎಚ್ಚರಗೊಂಡಿವೆ
ಬೇಲಿಯ ಹೊರಗಿನಲೋಕ
ಕೈ ಬೀಸುತ್ತಿದೆ; ಕರೆಯುತ್ತಿದೆ
ಬೇಲಿಯವರೆಗೆ ಹೋಗಲು
ಸಹಾಯ ಬೇಕಿದೆ
ಅಳುತ್ತೇನೆ ಮಗುವಿನಂತೆ
ನಿಧಾನಿಸುತ್ತೇನೆ;ಬೀಳುತ್ತೇನೆ
ಹತ್ತಿ ಹೋದವರು ಹಲವರು
ಮತ್ತೆ ನಾನು ಏಳುವ ಲಕ್ಷಣಗಳಿಲ್ಲ
Friday, February 29, 2008
ಚಿತ್ರ-ವಿಚಿತ್ರ
ಮಳೆಯಲ್ಲಿ ತೊಯ್ದು ಬಿದ್ದ ರಾತ್ರಿ. ಕಿರಿದಾದ ರಸ್ತೆ. ರಸ್ತೆ ಅಕ್ಕಪಕ್ಕದಲ್ಲಿ ಮುರಿದು ಬಿದ್ದ ಮನೆ-ಮಠಗಳು. ಮುರಿದ ಮನೆಯ ಗೊಡೆಗಂಟಿಕೊಂಡೇ ಮಂದವಾಗಿ ಉರಿಯುತ್ತಿರುವ ದಾರಿ ದೀಪ. ಗೊಡೆಯಲ್ಲಿನ ಮೊಳೆಯಲ್ಲಿ ಜೋತು ಬಿದ್ದಿರುವ ಒಂದು ಚಿತ್ರ ; ಬಲು ವಿಚಿತ್ರ.
ಸುಖವಿದ್ದ ಕಣ್ಣುಗಳಿಗೆ ಆ ಚಿತ್ರ ಕಾಣುವುದೇ ಇಲ್ಲ.
ಮನಸ್ಸಿನೆಲ್ಲ ಮೂಲೆಗಳಲ್ಲೂ ಕತ್ತಲೆ ತುಂಬಿದ ಯುವಕ. ಕಂಗೆಟ್ಟ ಕಂಗಳ ಹಿಡಿದು ಆ ದಾರಿಯಾಗಿ ಬರುತ್ತಾನೆ. ತಡವರಿಸುತ್ತಾನೆ. ಬೀಳುತ್ತಾನೆ. ವಿಚಿತ್ರ ಲೋಕ. ಅವನನ್ನು ಯಾರೂ ಎತ್ತುವುದಿಲ್ಲ. ನೋಡಿಯೂ ನೋಡದ ಕಣ್ಣುಗಳು.
ಆ ಯುವಕನಿಗೊಂದು ಕೂಗು. ಆರ್ತನಾದ. ತಮಟೆಯಲ್ಲಿ ಕಾದ ಸೀಸ ಬಿಟ್ಟಂತ ಅನುಭವ. ಚಿತ್ರದಲ್ಲಿನ ಕೈ ಕರೆಯುತ್ತಿದೆ. ಬಳಿ ಸಾರುತ್ತಾನೆ. ದಿಟ್ಟಿಸುತ್ತಾನೆ ಅರೆ ಕ್ಷಣ. ತೆರೆದ ಬಾಯಿ, ಬೀಸಿದ ಬಾಹುಗಳು. ಪಕ್ಕದಲ್ಲಿ ಸಣ್ಣಗೆ ಉರಿಯುತ್ತಿರುವ ಹಣತೆ. ಅರ್ಥವಾಗದು. ಕಣ್ಣು ಮುಚ್ಚುತ್ತಾನೆ. ಕಣ್ಣ ತೆರೆಯುವುದರೊಳಗೆ ಮನಸಿನೊಳಗಣ ಅನಂತ ಸಂತೋಷ. ಲೋಕವನ್ನು ಗೆಲ್ಲಬಲ್ಲೆನೆಂಬ ಆತ್ಮ ವಿಶ್ವಾಸ. ಗುರಿಗಳೆಲ್ಲ ತನ್ನ ಬರುವಿಕಿಯ ನಿರೀಕ್ಷೆಯಲ್ಲಿನ ಭಾವ. ಸ್ವರ್ಗ ತನ್ನ ಕೈಯಲ್ಲಿದೆ . ಭಲೇ! ಎನ್ನುತ್ತಲೇ ಯುವಕ ಮುಂದಿನ ಹೆಜ್ಜೆಯಿಡುತ್ತಾನೆ.
ದಿಟ್ಟ ಹೆಜ್ಜೆ; ರಾಜ ಠೀವಿ. ಹಿಂತಿರುಗಿ ನೋಡದ ಕಣ್ಣುಗಳು.
ಚಿತ್ರದೊಳಗಿನ ಧ್ವನಿ ಆಕಾಶ ಮುಟ್ಟುವಂತೆ ರೋದಿಸುತ್ತದೆ. ಯುವಕನೀಗ ಕಿವುಡ.ಚಿತ್ರದ ಬಾಯಿ ಕೊಂಚ ಜಾಸ್ತಿಯೇ ತೆರೆಯುತ್ತಿದೆ. ಬೀಸಿದ ಬಾಹುಗಳೂ ಇನ್ನೂ ಅಗಲ. ಹಣತೆ ಜ್ಯೋತಿ ಕ್ಷೀಣಿಸುತ್ತಿದೆ.
ಕತ್ತಲು ತುಂಬಿದ ಮನಸ್ಸಿಗೆ ಚಿತ್ರ ಕಾಯುತ್ತಿದೆ. ಬೆಳಕ ಕೊಟ್ಟು ತಾನು ಬೆಳಗುವುದಕ್ಕೆ. ದೀಪ ಹಚ್ಚಿಸಿಕೊಂಡವರು ಚಿತ್ರದ ಹಣತೆ ಹಚ್ಚುವುದ ಮರೆಯುತ್ತಾರೆ. ಚಿತ್ರಪಟದ ಮನಸ್ಸು ನಿಧಾನವಾಗಿ ಇಲ್ಲವಾಗುತ್ತಿದೆ. ಚಿತ್ರಕಾರನ ಅರಣ್ಯ ರೋದನ.
Saturday, February 23, 2008
ಹನಿಗಳು - ೨
ನನ್ನೀ ಎದೆಯೊಳಗೆ
ಕನಸುಗಳ ದೀಪಾವಳಿ
************************
ಒಲವಿನ ಹಣತೆಯನ್ನು
ಎದೆಯೊಳಗೆ ಹೊತ್ತಿಸಿಟ್ಟಿದ್ದೆ
ಹಣತೆ ವಾಲಿ, ಹೃದಯ ಹೊತ್ತಿ
ಈಗ ಬರಿಯ ಬೂದಿ
************************
ನನ್ನವರೆಲ್ಲ ಜೊತೆಯಲ್ಲೇ
ನಡೆಯುತ್ತಿದ್ದಾರೆ
ನನ್ನ ದಾರಿಗೂ, ಅವರ ದಾರಿಗೂ
ಸಮಾನಾಂತರ!
************************
ಹೆಜ್ಜೆಗುರುತ ಹಿಡಿದು
ಹಿಂದೆ ಬರುತ್ತಿದ್ದವಳನ್ನು
ನೋಡಿ ನಕ್ಕು
ಗಾಳಿಯಲ್ಲಿ ತೇಲಿಹೋದ
Wednesday, January 30, 2008
ಈಗೀಗ ರಾತ್ರಿಗಳಲ್ಲಿ
ಅವನು ಸೂತ್ರಗಳನ್ನು
ಸಡಿಲಗೊಳಿಸುತ್ತಿರಬೇಕು
ಆಕಾಶಕ್ಕೆ ಅಂಟಿಕೊಂಡ ಚುಕ್ಕಿಗಳೆಲ್ಲ
ಧಪ್ ಎಂದು ಮನೆಯಂಗಳದಲ್ಲಿ
ಬೀಳುತ್ತಿವೆ ; ಪಂಜುಗಳಾಗುತ್ತಿವೆ.
ಸ್ವಲ್ಪ ಮಿಸುಕಾಡಿದರೂ ಸಾಕು
ನಾನು ಹೊತ್ತಿಕೊಳ್ಳುತ್ತೇನೆ.
ಜೊತೆಗೆ ನನ್ನ ಗುಡಿಸಲು,
ಸುತ್ತಲಿನ ಕಪ್ಪು ಭೂಮಿ.
ಸಂಜೆಗಳಲ್ಲಿ ಮೂಲೆ ಸೇರಿಬಿಡುತ್ತೇನೆ,
ಏಳುವುದೇ ಇಲ್ಲ.
ಚುಕ್ಕಿಗಳು ಬೀಳುತ್ತಲೇ ಇವೆ.
ನನಗೆ ತಲೆಭಾರ.
ಈಗೀಗ ರಾತ್ರಿಗಳಲ್ಲಿ
ನಾನು ಅರೆ ಹುಚ್ಚಿ.
Thursday, December 13, 2007
ಹಳೆಯ ಹನಿಗಳು
ಮುಖ ತಿರುಗಿಸಿ ಹೋದವಳ
ಹಿಂದೆ ಹೋಗಲು
ಕಾರಣ ಹುಡುಕುತ್ತಿದ್ದೇನೆ
~~~*~~~
ಚಂದ್ರನ ಮೊಗವ ನೋಡಲು
ನನ್ನ ಚಂದ್ರಮುಖಿ ಕಣ್ಣೆತ್ತಲು
ಚಂದ್ರ ಅವಳ ಕಣ್ಮಿಂಚಿಗೆ ನಾಚಿ
ಮೋಡಗಳ ಸೆರಗು ಎಳೆದುಕೊಂಡ
~~~*~~~
ನಾನೇ ಕಟ್ಟಿಕೊಂಡ
ವರ್ತುಲ ಬೇಲಿಯಲ್ಲಿ
ಮೂಲೆಗಳನ್ನ ಹುಡುಕುತ್ತಿದ್ದೇನೆ
ಅವಿತುಕೊಳ್ಳಲು
~~~*~~~
ಅವಳು ಒಂದೇ ಸಮನೆ
ಬಿಕ್ಕುತ್ತಿದ್ದಳು; ಕಾರಣರ್ಯಾರೋ?
ಜಾರುವ ಆ ಕಣ್ಣ ಹನಿಗಳಲ್ಲಿ
ನನ್ನದೇ ಮುಖವಿತ್ತು
(ಕೊನೆಯ ಹನಿಯ ಪದಜೋಡಣೆಯನ್ನು ಸರಿಪಡಿಸಿದ ಸ್ನೇಹಿತನಿಗೆ ಹೃತ್ಪೂರ್ವಕ ವಂದನೆಗಳು)
Monday, December 03, 2007
ನಿಮಗೊಂದಿಷ್ಟು ಪ್ರಶ್ನೆಗಳು
ನ್ಯಾಯ, ಅನ್ಯಾಯ, ನೀತಿ, ನಿಯಮ, ಸತ್ಯ, ಸುಳ್ಳು, ಪ್ರಾಮಾಣಿಕತೆ, ಮೋಸ ಇತ್ಯಾದಿಗಳ ಅರಿವು ಮನುಷ್ಯನಿಗೆ ಮೊದಲ ಸಲ ಹೇಗಾಗಿರಬಹುದು? ಯಾಕಾಗಿರಬಹುದು?
ವಿ.ಸೂ : ಮನಸ್ವಿನಿ ಆರಾಮವಾಗಿದ್ದಾಳೆ :)
Thursday, November 22, 2007
ಕಲ್ಲು ,ಕಲೆ ಮತ್ತು ಅವಳು
ಕಲೆಯ ತಂದೇನೆಂದಳು.
ಕಲ್ಲು ಮುಟ್ಟಿದಳು,
ಪರೀಕ್ಷಿಸಿದಳು.
ಕೆತ್ತಿದಳು, ನಕ್ಕಳು.
ಹಿತವೆನಿಸುತ್ತಿತ್ತು ನನಗೂ!
ಮರುಕ್ಷಣ ಏನನ್ನಿಸಿತೋ
ಜೋರಾಗಿ ಹೊಡೆದಳು
ಕೆಡವಿದಳು ಕಲ್ಲಿನಂತ ನನ್ನನ್ನು
ಬಂಡೆಗಲ್ಲಾಗಿದ್ದ ನಾನು
ಈಗ ಚೂರು ಚೂರಾಗಿದ್ದೇನೆ
(ಮತ್ತೊಂದು ಹಳೆಯ ಹಾಡು)
Tuesday, October 23, 2007
ನಿನ್ನ ಕಂಗಳು
ಅಲ್ಲೇ ಪಕ್ಕದಲ್ಲಿ
ನಗುತ್ತಿವೆ ಚುಕ್ಕಿಗಳಂತೆ
ಸುತ್ತೆಲ್ಲ ಬೆಳದಿಂಗಳ ಹಬ್ಬವಂತೆ
ಇಲ್ಲಿ ಮಿಂಚು ಹುಳುಗಳು
ದೀಪ ಹಿಡಿದು ಹಾರುತ್ತಿವೆಯಂತೆ
ಹಾಗೆನ್ನುತ್ತಿದ್ದಾರೆ ಜನರೆಲ್ಲ
ನನಗೆ ಇದ್ಯಾವ ಕುರುಡುತನ!
ಹಾಂ! ಗೊತ್ತಾಯ್ತು ಬಿಡು
ನಿನ್ನ ಜೋಡಿ ಕಂಗಳಿಲ್ಲಿ ಇಲ್ಲ ನೋಡು
ಅದಕೆ ಬರಿಯ ಕತ್ತಲು
ನಿನ್ನ ಒಂದು ನೋಟ ಸಾಕು
ಬಾಳ ದೀಪ ಬೆಳಗಲು
( ಬಹಳ ಹಿಂದೆ ಬರೆದ ಹಾಡು. ಯಾವ ತಿದ್ದುಪಡಿ ಮಾಡದೆ ಇಲ್ಲಿ ಹಾಕುತ್ತಿದ್ದೇನೆ. )
Tuesday, August 28, 2007
ತಿಳಿದಿರಲಿಲ್ಲ
ನಿಮ್ಮ ಪಾದಗಳಿಗೊರಗುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಪುಣ್ಯ ಸ್ಪರ್ಶವೆಂದು
ಮೆಲ್ಲನೆ ನೀವು ಹೊಸ್ತಿಲನು ದಾಟಿ
ಕದ ಹಿಡಿದು ಹಿಂತಿರುಗಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಹೊನ್ನ ದಿನವೆಂದು
ಪಂಚೆಯೆತ್ತಿ ಮೆಟ್ಟಿಲನು ಇಳಿಯುತ್ತ
ಅಂಗಳದ ರಂಗೋಲಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಬಣ್ಣದ ಕಡೆಯ ಮೆರುಗೆಂದು
ಮಲ್ಲಿಗೆ ಬಳ್ಳಿಯಿಂದಾರಿಸಿ
ಬಿರಿದ ಮೊಗ್ಗು ನೀವು ಮುಡಿಯಿಲ್ಲಿಡುವಾಗ
ತಿಳಿದಿರಲಿಲ್ಲ ನನಗಂದು
ಬಾಳ ಕಡೆಯ ಕಂಪೆಂದು
ಅಂಗಳವ ದಾಟಿ, ಕೇರಿಯ ದಾರಿಯಲ್ಲಿ
ನೀವು ನಡೆಯುತ್ತ, ತಿರುಗುವಾಗ
ತಿಳಿದಿರಲಿಲ್ಲ ನನಗಂದು
ನಿಮ್ಮ ಕಡೆಯ ನೋಟವೆಂದು
Friday, July 13, 2007
ಏನ್ ಗುರು...ಕಾಫಿ ಆಯ್ತಾ?
ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಯಾವುದೇ ರೀತಿಯ ಚೌಕಾಸಿಯಿಲ್ಲದೆ ಕನಸುಕಂಡು,ಆ ಕನಸನ್ನು ಹೆಜ್ಜೆಹೆಜ್ಜೆಯಾಗಿ ನನಸು ಮಾಡುತ್ತಿರುವ ವೃತ್ತಿಪರ ಯುವ ಕನ್ನಡಿಗರ ಬಳಗವೇ "ಬನವಾಸಿ ಬಳಗ".
ಕನ್ನಡ, ಕರ್ನಾಟಕ, ಕನ್ನಡಿಗರ ಕುರಿತಾದ ಎಲ್ಲ ವಿಷಯಗಳನ್ನು, ಕನ್ನಡದ ದೃಷ್ಟಿಯಿಂದ ನೋಡಿ, ಕನ್ನಡಿಗರಿಗೆಲ್ಲ ಕನ್ನಡ ದೃಷ್ಟಿಕೋನವನ್ನು ಪರಿಚಯಿಸುತ್ತಿರುವ ಅದ್ಭುತವಾದ ಬ್ಲಾಗ್ ಏನ್ ಗುರು
ಕನ್ನಡಿಗರೆಲ್ಲ ಏನ್ ಗುರು ಬ್ಲಾಗ್ ಓದಿ, ಪ್ರತಿಕ್ರಿಯಿಸಿರಿ.
ಕನ್ನಡ ಬ್ಲಾಗಿಗರೇ, ನಿಮ್ಮ ಬ್ಲಾಗಿನಲ್ಲಿ ’ಏನ್ ಗುರು’ ಕೊಂಡಿಯನ್ನು ಹಾಕಿಕೊಳ್ಳಿ ; ’ಏನ್ ಗುರು’ ಬ್ಲಾಗನ್ನು ಪ್ರೋತ್ಸಾಹಿಸಿ
ತುಂಬಾ ಧನ್ಯವಾದಗಳು.
Saturday, June 02, 2007
ಕೇಳೇ ನನ್ನವ್ವ
ಬಳ್ಳ್ಯೊಳು ಹೂ ಬೆಳ್ಳಿ
ಸಾಲಾಗಿ ಅರಳಿ ನಿಂತ್ಯಾವ, ನನ್ನವ್ವ
ಕೈಬೀಸಿ ನನ್ನ ಕರೆದಾವ
ಮಣ್ಣಿನ ಮಡಿಕೆಯು
ಬೆಣ್ಣಿಯ ಗಡಗಿಯು
ಬೆರಳಿಡಿದು ನನ್ನ ನಡೆಸ್ಯಾವ, ನನ್ನವ್ವ
ನನ್ ಕೂಡೆ ಭಾರಿ ನಗುತಾವ
ಅಂಕಣದ ಚಪ್ಪರ
ಹರಿದರಿದು ನೋಡ್ಯಾರ
ಚಂದಿರ,ನೂರು ಚುಕ್ಕಿಗಳು, ನನ್ನವ್ವ
ಮನದುಂಬಿ ನನ್ನ ಹರಸಾರ
ಬೆಟ್ಟದ ಮೇಲಿನ
ಕಟ್ಟೆಯ ಕರಿದೇವ
ಕರುಣೆಯ ಕಣ್ಣ ತೆರಕೊಂಡು, ನನ್ನವ್ವ
ಕಾದಾನೆ ನನ್ನ ಕೈಬಿಡದೆ
ಚಿಂತಿಮಾಡತಿ ಯಾಕ?
ನಗ್ತೀನಿ ಇರತನಕ
ಉಸಿರಾಗ ನಿನ್ನ ಹಾಡೈತಿ ,ನನ್ನವ್ವ
ಹಸಿರಾಗತೈತಿ ನನ ಬಾಳ
Friday, May 04, 2007
ಅಮ್ಮನ ಗಾದೆಗಳು
೧. ಶೆಟ್ಟಿ ಹತ್ರ ಕಷ್ಟ ಹೇಳ್ಕೊಂಡ್ರೆ,ನಾಲ್ಕಾಣೆ ಇಟ್ಟು ಹೋಗು ಅಂದಿದ್ನಂತೆ ( ಶೆಟ್ರೆಲ್ಲಾ ಬೇಜಾರು ಮಾಡ್ಕೋಬೇಡಿ, ಇದು ಯಾವ ಕಾಲದ್ದೊ! :) )
೨. ತನ್ನ ಬಗುಲಲ್ಲಿ ಆನೆ ಸತ್ರು ಪರ್ವಾಗಿಲ್ಲ,ಬೇರೆಯವ್ರ ತಟ್ಟೆಲಿ ನುಶಿ ಸತ್ತಿದ್ದು ಕಾಣುತ್ತೆ ಇವರಿಗೆ ( ನುಶಿ = ಸೊಳ್ಳೆ)
೩. ಮಾಡೋದು ದುರಾಚಾರ,ಮನೆ ಮುಂದೆ ಬೃಂದಾವನ
೪. ವಾರಗಿತ್ತಿ ಎಂದಿದ್ರೂ ದಾರಿ ಮುಳ್ಳು
೫ ರೋಣಿ ಮಳೆ ಹೊಯ್ದರೆ,ಓಣಿಯೆಲ್ಲಾ ಕೆಸರು
೬. ಸೋಜಿಗದ ಬೆಕ್ಕು ಮಜ್ಜಿಗೆ ಆಮ್ರ ಕುಡಿದಿತ್ತಂತೆ ( ಆಮ್ರದ ಅರ್ಥ ಗೊತ್ತಿಲ್ಲ, ನಮ್ಮ ಅಮ್ಮ ಸಿಟ್ಟು ಬಂದಾಗ ಈ ಗಾದೆ ಹೇಳೊದು ಜಾಸ್ತಿ, ಆಗ ನನ್ನ ಹತ್ರ ಅರ್ಥ ಕೇಳೋಕೆ ಆಗಲ್ಲಪ್ಪ )
೭. ಮುನ್ನೋಡಿ ಪಾಯಸ ಉಣ್ಣೊ ಮೂಳಾ ಅಂದ್ರೆ ಅವ ಯಾವ ಹೊಲದ ಗಸಗಸೆ ಅಂದ್ನಂತೆ
೮. ಹಾಡಿದ್ದೇ ಹಾಡೋ ಕಿಸ್ಬಾಯಿ ದಾಸ
೯. ಮದುವೆಯಾಗೋ ಬ್ರಾಹ್ಮಣ ಅಂದ್ರೆ ನೀನೆ ನನ್ನ ಹೆಂಡತಿ ಅಂದ
೧೦.ನವಿಲು ಕುಣಿಯುತ್ತೆ ಅಂತ ಕೆಂಭೂತ ಕುಣಿಯೋಕಾಗತ್ತ? (ಅಲ್ವಾ ಮತ್ತೆ ?)
೧೧.ಮನೇಲಿ ಗದ್ಲ ಅಂತ ಮಂಜ್ಗುಣಿ ತೇರಿಗೆ ಹೋಗಿದ್ರಂತೆ
೧೨.ಬೇರೆಯವ್ರ ಮನೆ ಎಮ್ಮೆ ಸಗಣಿನೂ ರುಚಿನೆ ಇವ್ರಿಗೆ ( ಯಾರಿಗೆ? ನಂಗೊತ್ತಿಲ್ಲ )
೧೩.ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
೧೪ ತಾನೂ ತಿನ್ನ,ಪರರಿಗೂ ಕೊಡ.
೧೫ ಆರು ಕೊಟ್ರೆ ಅತ್ತೆ ಕಡೆ,ಮೂರು ಕೊಟ್ರೆ ಮಾವನ ಕಡೆ
೧೬.ಬಡ ದೇವ್ರನ್ನ ಕಂಡ್ರೆ ಬಿಲ್ಪತ್ರೆನೂ ಭುಸ್ ಅನ್ನುತ್ತೆ
Wednesday, April 25, 2007
ಹಾದಿಬದಿಯ ಹೂವು
ಹೆಸರಿಲ್ಲದ ಹೂವು
ಮಡಿಲಲೆ ಹುಟ್ಟಿ ಕರಗುವ ಗಂಧ
ಬಣ್ಣವೋ!ಮಾಸಲು,ಮಂದ
ನಿನ್ನೆ ನಾಳೆಗಳ ಚಿಂತೆ ಇದಕಿಲ್ಲ
ನಗುವುದೊಂದೇ ಧರ್ಮ ದಿನವೆಲ್ಲ
ಸಂಜೆ ಬಾನಿನ ಹೊನ್ನ ಹೊತ್ತಲಿ
ಧಾರಿಣಿಯನಪ್ಪಿದೆ ಮೆಲ್ಲನೆ ಮುತ್ತಲಿ
ಹಾಂ!ಇದು ಹಾದಿ ಬದಿಯ ಹೂವು
ಹೆಸರಿಲ್ಲದ ಹೂವು
Wednesday, April 11, 2007
ಕನಸು
ಕಣ್ಣು ಮುಚ್ಚಿ,ನಿದ್ರೆ ಹೋಗಿ
ಕಂಡ ಕನಸುಗಳೆಷ್ಟೊ ;ಹೂವಿನ ಹಾದಿಗಳೆಷ್ಟೊ!
ಬೆಳಗಾಗುವ ಮುನ್ನ,ಕಣ್ಣು ತೆರೆಯುವ ಮುನ್ನ
ಅಳಿಸಿ ಹೋದ,ಹಳಸಿ ಹೋದ
ನವಿರು ಕನಸುಗಳೆಷ್ಟೊ!
ಇಂದಿಲ್ಲಿ ಹಗಲಾಗಿದೆ,ಕಣ್ಣು ತೆರೆದಿದೆ
ಮನದಲ್ಲಿ ಹೊಸತು ಕನಸು
ಹೂವಿನ ಹಾದಿಯೇನಿಲ್ಲ
ಹುರುಪು ತುಂಬಿ,ಛಲವ ಬಿತ್ತಿ
ಮುಂದೆನ್ನ ಕಥೆ ಬರೆಯುವ
ಸರಳ ಕನಸಷ್ಟೆ!
ಅಂದ ಹಾಗೆ ನನ್ನ ಬ್ಲಾಗಿಗೆ ಒಂದು ವರ್ಷವಾಯಿತು. ಉತ್ತೇಜಿಸಿದ,ತಿದ್ದಿದ ,ಪ್ರಶಂಸಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು
Sunday, March 18, 2007
ದಡದಿಂದ ದಡಕೆ
ನನ್ನ ಬೆರೆಳಂಚು,ಉಸುಕಿನಲಿ
ಬರೆದದ್ದೆಲ್ಲಾ ನಿನ್ನ ಹೆಸರೆ
ಸೊಂಯ್ಯನೆ ಹರಿದು ಬರುವ ತೆರೆ
ನಿನ್ನ ಹೆಸರ ಕುಡಿಯೆ,ಎನಗೆ ಅಳುಕಿಲ್ಲ
ಆ ದಡದ ಅಲೆಯಲ್ಲಿ
ಸಿಕ್ಕಿರಬೇಕಲ್ಲಾ,ನಿನಗೆ ನನ್ನ ಒಲವೆಲ್ಲ!
Friday, February 23, 2007
ಅಂದು-ಇಂದು
ಅಂದು ನಗುತ ಕುಳಿತೆವಲ್ಲಿ
ಬಾನ ತುಂಬ ಹಕ್ಕಿ ಗುಂಪು
ಗಾಳಿಗಿತ್ತು ಮಧುರ ಕಂಪು
ಮರದ ತುಂಬ ಹೂವ ರಾಶಿ
ಮನದ ತುಂಬ ಒಲಮೆ ಸೂಸಿ
ನಿನಗೆ ನಾನು,ನನಗೆ ನೀನು
ಬರೆದ ಹಾಡು ಭಾವ ಜೇನು
ಇಂದು ಬರಿಯ ಅಕ್ಷರ
ಪ್ರೀತಿ ತಂತೇ ಬೇಸರ?
ಕೆರೆಯ ಹರಿವ ನೀರಾಗಿ
ಮರದ ಬಾಡೋ ಹೂವಾಗಿ
ಒಲವು ಮರೆಯಾಯಿತೆ?
ಇಂದು ಮರೆತು ಹೋಯಿತೆ?
Sunday, February 11, 2007
ಸುವರ್ಣ ಕರ್ನಾಟಕಕ್ಕೆ ಬರೆಗಳು
೧. ಕನ್ನಡ ತಮಿಳಿನಷ್ಟೆ ಹಳೆಯದಾದರು ಶಾಸ್ತ್ರೀಯ ಭಾಷೆಯಲ್ಲ...
೨ ಕಾವೇರಿ ಕನ್ನಡ ನಾಡಿನಲ್ಲೆ ಹುಟ್ಟಿದರೂ ತಮಿಳುನಾಡಿಗೆ ಹೆಚ್ಚಿನ ಪಾಲು
ಬಹುಶ: ನಮಗೆ ಕನ್ನಡಕ್ಕೆ ಜಯವಾಗಲಿ ಅನ್ನುವುದೆ ಗೊತ್ತೆ ಹೊರತು, ಕೇಂದ್ರಕ್ಕೆ ಧಿಕ್ಕಾರ ಅನ್ನುವದು ಗೊತ್ತಿಲ್ಲ. ಅದಕ್ಕೆ ಈ ತರಹದ ಬರೆಗಳು ಆಗಾಗ ಆಗುತ್ತಲೆ ಇವೆ. ಹಿಂದಿಯ ಹೇರಿಕೆಯನ್ನು ವಿರೋಧಿಸಿದ್ದಕ್ಕೆ ತಮಿಳುನಾಡಿಗೆ ಶಾಸ್ತ್ರಿಯ ಭಾಷೆಯ ರಾಜ್ಯದ ಸ್ಥಾನಮಾನವೂ ಸಿಕ್ಕಿದೆ....ಕಾವೇರಿಯ ಹೆಚ್ಚಿನ ಪಾಲು ಕೂಡ.
ನಾವು ಕಾರಣರೆ?
ಹೌದು...ನಮ್ಮ ಶಾಂತ ರೂಪ, ಆಲಸ್ಯ ಎಲ್ಲ ನಮ್ಮನ್ನ ಈ ಸ್ಠಿತಿಗೆ ತಂದಿದೆ.
ಕೇಂದ್ರಕ್ಕೆ ಕನ್ನಡಿಗರ ನಿಜ ಸ್ವರೂಪದ ಪರಿಚಯವಾಗಬೇಕು. ಕೇಂದ್ರದ ಕಿವಿಗೆ ಸ್ವಲ್ಪ ಕಾದ ಎಣ್ಣೆಯನ್ನು ಬಿಡುವ ಹೊತ್ತು ಇದು.
ಕನ್ನಡಿಗರೇ, ಇನ್ನು ಎಷ್ಟು ಹೊತ್ತು ಮಲಗಿರೋಣ!!!ಎದ್ದೇಳಿ.